Warning: Undefined array key "HTTP_REFERER" in /home1/surgijjn/baidashree.org/wp-content/themes/badagubettu/badagubettu.theme#archive on line 43

Baidhashree

Shree Brahma Baidarkala Garodi Yellur

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಎಲ್ಲೂರು

ಉಡುಪಿಯಿಂದ ಎನ್.ಎಚ್. 66ರಲ್ಲಿ ಕಾಪು ಉಚ್ಚಿಲ ಮಾರ್ಗವಾಗಿ ಉಚ್ಚಿಲ ಮಹಾಲಕ್ಷಿ ದೇವಸ್ಥಾನದ ಹತ್ತಿರ ಎಡಕ್ಕೆ ಪಣಿಯೂರು ರಸ್ತೆಯಲ್ಲಿ ಸುಮಾರು 6ಕಿ.ಮೀ. ಸಾಗಿದಾಗ ಎಲ್ಲೂರು ಶ್ರೀ ಮಹೋತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ ಎಲ್ಲೂರು ಗರೋಡಿ ಇದೆ.
ಈ ಗರೋಡಿಯು ಆಯದ ಗರೋಡಿಯಾಗಿದ್ದು ಮೂರು ಬಾಗಿಲುಗಳವೆ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು ಇನ್ನೆರಡು ದ್ವಾರಗಳು ಪಶ್ಚಿಮ ಹಾಗೂ ಉತ್ತರಾಭಿಮುಖವಾಗಿದೆ. ಗರೋಡಿಯು ಷಡಾಧಾರ ಪ್ರತಿಷ್ಠೆಯಲ್ಲಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬೆಳ್ಳಿ ಕವಚ ಹೊದಿಸಿದ ಕುದುರೆಯೇರಿ ಕುಳಿತ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರಿಗೆ ಕೂಚಿ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಹಾಗೂ ಜೋಗಿ ಪುರುಷರ ಮಣೆ ಮಂಚ ಇದೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಒಕ್ಕು ಬಲ್ಲಾಳರ ಮಣೆ ಮಂಚ ಇದೆ.
ಬ್ರಹ್ಮ ಗುಡಿಯ ಹೊರಗೆ ಬಲ ಭಾಗದಲ್ಲಿ ಕೊಡಮಣಿತ್ತಾಯ ಹಾಗೂ ಬಂಟ ದೈವಗಳ ಮಣೆ ಮಂಚವಿದೆ.
ಬ್ರಹ್ಮಗುಡಿಯ ಎದುರಿಗೆ ಗುರುಕಂಭವಿದೆ.
ಗರೋಡಿಯ ಆವರಣದೊಳಗಿರುವ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗಳಿವೆ.
ಆವರಣದೊಳಗಿನ ಇನ್ನೊಂದು ಗುಡಿಯಲ್ಲಿ ಜಾರಂದಾಯ ಮತ್ತು ಬಂಟ, ಜುಮಾದಿ, ನಂದಿಗೋಣ, ಮೈಸಂದಾಯ, ಪಂಜುರ್ಲಿ, ಕುಕ್ಕಿನಂತಾಯ ದೈವಗಳ ಮಣೆ ಮಂಚವಿದೆ. ಪಕ್ಕದ ಇನ್ನೊಂದು ಗುಡಿಯಲ್ಲಿ ಹುಲಿ ಚಾಮುಂಡಿ ದೈವದ ಮಣೆ ಮಂಚವಿದೆ.
ಗರೋಡಿಯ ಆವರಣದೊಳಗೆ ಅಯ್ಯಕಲ್ಲು, ತುಳಸೀಕಟ್ಟೆಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗ ಬನವಿದೆ.
ಹಿಂದೆ ಒಂದು ಕಾಲದಲ್ಲಿ ಕೋಟಿಚೆನ್ನಯರಿಗೆ ಮರದ ಪಾಪೆ ಮಾಡಿಸ ಬೇಕೆಂದು ಊರವರು ಮರವೊಂದನ್ನು ಗುರುತಿಸಿ ಕಡಿಯಲು ಗಂಧ ಹಾಕಿ ಪ್ರಾರ್ಥನೆ ಮಾಡಲು ಮುಂದಾದಾಗ ಮೊದಲು ಮರ ಕೊಡಲು ಒಪ್ಪಿದ ಮನೆಯವರು ಮರವನ್ನು ಕೊಡಲಾಗುವುದಿಲ್ಲ ಎಂದರಂತೆ. ನಂತರ ಬೈದೇರುಗಳು ದರ್ಶನದಲ್ಲಿ ಇನ್ನು ಮುಂದೆ ಈ ಗರೋಡಿಯಲ್ಲಿ ಯಾವ ಶಕ್ತಿಗಳಿಗೂ ಮರದ ಪಾಪೆ ಮಾಡಿಸ ಬಾರದಾಗಿ ಅಪ್ಪಣೆ ಮಾಡಿದರು. ಹಾಗಾಗಿ ಹೊರಗಿನ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗುವಿಗೆ ಬಿಟ್ಟರೆ ಗರೋಡಿಯೊಳಗೆ ಯಾವ ಶಕ್ತಿಗಳಿಗೂ ಮರದ ಪಾಪೆಗಳಿಲ್ಲ.

ಕರುಣಾಕರ ಪೂಜಾರಿ

1990ರಿಂದ ಕರುಣಾಕರ ಪೂಜಾರಿಯವರು ಪೂ ಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರ ಮೊದಲು ಇವರ ಅಜ್ಜ ಮೋನಪ್ಪ ಪೂಜಾರಿ, ಅದಕ್ಕೂ ಮೊದಲು ಪಕೀರ ಪೂಜಾರಿಯವರು ಸೇವೆ ಮಾಡಿದ್ದರು. ಈಗ ಬೈದರ ದರ್ಶನಕ್ಕೆ ಈ ಗರೋಡಿಯಲ್ಲಿ ಸ್ಥಳ ಪಾತ್ರಿಗಳು ಇಲ್ಲ. ಹಿಂದೆ ಅಣ್ಣಪ್ಪ ಪೂಜಾರಿ, ಬೊಳ್ಳು ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಎಲ್ಲೂರು ಗುತ್ತು ಪ್ರಪುಲ್ಲ ಶೆಟ್ಟಿಯವರು ಈ ಗರೋಡಿಯ ಮೊಕ್ತೇಸರರಾಗಿದ್ದಾರೆ.
ಗರೋಡಿಯಲ್ಲಿ ನಿತ್ಯವೂ ದೀಪ ಹಚ್ಚುತ್ತಾರೆ. ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆಗಳು ನಡೆಯುತ್ತವೆ. ಎಳ್ಳಮಾವಾಸ್ಯೆಯ 6ನೇ ದಿನ ಅಗೆಲು ಸೇವೆ, 7ನೇ ದಿನ ಬೈದೇರುಗಳ ನೇಮ, ಜೋಗಿಪುರುಷ, ಮಾಯಂದಾಲ್ ಕೋಲ, ವರ್ಷಂಪ್ರತಿ ನಡೆಯುತ್ತದೆ. ಬೇಷ ತಿಂಗಳಲ್ಲಿ ಗರಡಿಯಿಂದ ಭಂಡಾರ ಹೋಗಿ ಗರೋಡಿ ಮನೆಯಲ್ಲಿ ಮಾಯಂದಾಲ್ಗೆ ಅಗೆಲು ಸೇವೆ ನಡೆಯುತ್ತದೆ.
ಕುಂಜೂರು, ಎಲ್ಲೂರು, ಮಾಣಿಯೂರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರಿವೆ. ಈ ಊರುಗಳ ಜನರು ಗರೋಡಿಯಲ್ಲಿ ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವಗಳಲ್ಲಿ ಭಾಗಿಯಾಗುತ್ತಾರೆ. ಊರ ಜನರ ವರಡ ವಂತಿಗೆ, ಕಾಣಿಕೆಗಳಿಂದ ಗರೋಡಿಯ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತದೆ.
1980ರಲ್ಲಿ ಗರೋಡಿಯ ಜೀರ್ಣೋದ್ಧಾರವಾಗಿದೆ.
ಸಂತು ಪರವ, ಬೊಗ್ಗು ಪರವ,ಮೂಡುಬೆಳ್ಳೆ, ಜಯ ಪರವ ನೀರೆ, ಇವರು ಈ ಗರೋಡಿಯ ನೃತ್ಯ ವಿಶಾರದರು. ರಮೇಶ್ ಮಡಿವಾಳ, ಎಲ್ಲೂರು ಇವರು ಮಡಿವಾಳರಾಗಿ, ಲಕ್ಷಣ ಸೇರಿಗಾರ ಎಲ್ಲೂರು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಎಲ್ಲೂರು ಅಂಚೆ,
ಕಾಪು ತಾಲೂಕು,
ಉಡುಪಿ 574113.

ಪೂಪೂಜನೆಯವರು

ಕರುಣಾಕರ ಪೂಜಾರಿ,
ಮೊಬೈಲ್: 8088107896

ಮಾಹಿತಿ ಸಂಗ್ರಹಿಸಿದ ದಿನಾಂಕ:

22-11-2024

Shree Brahma Baidarkala Poyya Podikalla Garodi Kaup

ಶ್ರೀ ಬ್ರಹ್ಮ ಬೈದರ್ಕಳ ಪೊಯ್ಯ ಪೊಡಿಕಲ್ಲ ಗರೋಡಿ, ಕಾಪು

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ NH 66 ರ ಮೂಲಕ ಕಾಪು ತಲುಪಿ ಹೊಸ ಮಾರಿಗುಡಿಯ ಹತ್ತಿರ ಬಲಕ್ಕೆ ಕಾಣುವ ಗರೋಡಿಯ ಸ್ವಾಗತ ಗೋಪುರದ ಮೂಲಕ ಮುಂದೆ ಹೋದರೆ ಸುಮಾರು 11/2 ಕಿ ಮೀ.ದೂರದಲ್ಲಿದೆ ಈ ಗರೋಡಿ.
ಇದು ಬಹಳ ಪುರಾತನವಾದ ಆಯದ ಗರೋಡಿಯಾಗಿದ್ದು 2010ರಲ್ಲಿ ಷಡಾಧಾರ ಪ್ರತಿಷ್ಟೆಯಾಗಿದೆ. ಗರೋಡಿಯ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು ಇನ್ನೊಂದು ದ್ವಾರವು ಬಡಗು ದಿಕ್ಕಿಗೆ ಇದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕೋಟಿಚೆನ್ನಯರು ಕೇಂಜದಿಂದ ಕಾಪುವಿಗೆ ಬಂದು ಇಲ್ಲಿಯ ಬೈರ ಗುತ್ತು ಮತ್ತು ದೊರೆಗಳ ಗುತ್ತು ಎಂಬಲ್ಲಿ ಸುರಿಯವನ್ನು ನೆಲಕ್ಕೆ ತಾಗಿಸಿ ನಿಶಾನೆ ಮಾಡಿ, ಬೈರ ಗುತ್ತು ಮನೆಯ ಯಜಮಾನರಿಗೆ ಕನಸಿನಲ್ಲಿ ಬಂದು ನಿಮಗೆ ಒಂದು ಜಾಗದಲ್ಲಿ ಒಂದು ಮುದ್ದೆ ಮಣ್ಣು ಹುತ್ತವಾಗಿ ಗೋಚರಿಸುತ್ತಿದ್ದು ಆ ಜಾಗದಲ್ಲಿ ಎರಡು ಗಿಡಗಳು ಬೆಳೆದಿರುತ್ತವೆ. ಅಲ್ಲಿಯೇ ನಮಗೆ ಗರೋಡಿ ಕಟ್ಟಿಸ ಬೇಕೆಂದು ಆದೇಶವಿತ್ತರು. ಮರುದಿನ ಗುತ್ತಿನ ಮನೆಯವರು ಅಂತಹ ಜಾಗವನ್ನು ಹುಡುಕುತ್ತಾ ಹೋದಾಗ ಹೊಯಿಗೆ ಮತ್ತು ಹುಡಿಕಲ್ಲುಗಳಿಂದಾವೃತವಾದ (ಪೊಯ್ಯ ಮತ್ತು ಪೊಡಿಕಲ್ಲು) ಆ ಜಾಗ ಸಮುದ್ರ ತೀರದಲ್ಲಿ ಕಂಡು ಬಂತು. ಆಗ ಅಲ್ಲಿ ನೆರೆದ ಬೈದರ ಭಕ್ತರೊಬ್ಬರಿಗೆ ಆವೇಶ ಬಂದು ದರ್ಶನದಲ್ಲಿ ನುಡಿಯಾದಂತೆ ಅಲ್ಲಿ ಗರೋಡಿ ನಿರ್ಮಾಣವಾಗಿದೆ ಈ ಪೊಯ್ಯ ಪೊಡಿಕಲ್ಲ ಗರೋಡಿ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ನಾಗ ಬ್ರಹ್ಮರ ಮೂರ್ತಿ, ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರಿಗೆ ಪೂಜೆಯಿದೆ. ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮತ್ತು ಇಬ್ಬರು ಮಕ್ಕಳ ಮರದ ಪಾಪೆ ಇದೆ. ಗುಂಡದ ಬಲಭಾಗದಲ್ಲಿ ಜೋಗಿ ಪುರುಷ ಹಾಗೂ ಕುದುರೆಯಲ್ಲಿ ಕುಳಿತ ಒಕ್ಕುಬಲ್ಲಾಳರ ಮರದ ಪಾಪೆ ಇದೆ.
ಬ್ರಹ್ಮ ಗುಡಿಯ ಹೊರಗೆ ಚಾವಡಿಯಲ್ಲಿ ಧೂಮಾವತಿ ಮತ್ತು ಬಂಟ ದೈವಗಳ ಮಣೆ ಮಂಚ, ಹುಲಿಚಾಮುಂಡಿ , ಕೊಡಮಣಿತ್ತಾಯ ದೈವಗಳ ಮಣೆ ಮಂಚಗಳಿವೆ. ಇವಲ್ಲದೆ ಗುರುಕಂಭ ಹಾಗೂ ಕಾರಣಿಕ ತೋರಿ ಗರೋಡಿಗೆ ಬಂದ ವಿಶೇಷ ಕುದುರೆಯ ಮರದ ಪಾಪೆಯಿದೆ.
ಬಹಳ ಹಿಂದೆ ತೆಂಕಣದ ಮೂಲ್ಕಿ ಸೀಮೆಯ ಅರಸು ಕಟ್ಟಿಸುತ್ತಿದ್ದ ದೇವಾಲಯ ನೋಡಲು ಹೋದ ಇಲ್ಲಿಯ ಬೈರ ಗುತ್ತಿನ ಯಜಮಾನರು, ಅಲ್ಲಿ ಶಿಲ್ಪಿಗಳು ಕೆತ್ತಿದ್ದ ಮರದ ಕುದರೆಯನ್ನು ನೋಡಿ ಇದು ನಮ್ಮ ಗರೋಡಿಯಲ್ಲಿ ಇದ್ದರೆ ಎಷ್ಟು ಚೆನ್ನಾಗಿತ್ತು ಅಂದುಕೊಂಡರು. ಆ ರಾತ್ರಿ ಅಲ್ಲಿಯೇ ಉಳಿದ ಬೈರಗುತ್ತು ಯಜಮಾನರಿಗೆ ಕೋಟಿಚೆನ್ನಯರು ರಾತ್ರಿ ಕನಸಲ್ಲಿ ಬಂದು, ನಾವು ಆ ಕುದುರೆಯನ್ನು ಅಪೇಕ್ಷಿಸಿದ್ದೇವೆ ಎಂದು ಅರಸರಿಗೆ ಹೇಳುವಂತೆ ಆಜ್ಙಾಪಿಸಿದರು. ಆದರೆ ಕೋಟಿಚೆನ್ನಯರ ಮಹಿಮೆಯನ್ನರಿಯದ ಅರಸರು ಕುದುರೆಯನ್ನು ಕೊಡಲು ನಿರಾಕರಿಸಿದರು. ಆ ಕ್ಷಣದಲ್ಲೇ ಅರಸರು ಸ್ಮೃತಿ ತಪ್ಪಿ ಬೀಳುವರು. ಅರಸು ಪರಿವಾರ ಹಾಗೂ ಊರವರು ಸೇರಿ ಅರಸರ ಆರೋಗ್ಯಕ್ಕಾಗಿ ಕೋಟಿಚೆನ್ನಯರಿಗೆ ಕೈ ಮುಗಿದು ಪ್ರಾರ್ಥಿಸಿ, ಅರಸರ ಆರೋಗ್ಯ ಸರಿಯಾದಲ್ಲಿ ಕುದುರೆಯನ್ನು ಹರಕೆ ರೂಪದಲ್ಲಿ ಗರೋಡಿಗೆ ಕೊಡುವುದಾಗಿ ಹರಕೆ ಹೊತ್ತರು. ಸ್ಮೃತಿ ಬಂದ ಅರಸರು ಪಟ್ಟು ಬಿಡದೆ ಕೋಟಿಚೆನ್ನಯರು ಕಾರಣೀಕ ಪುರುಷರಾದರೆ ಈ ಕುದುರೆಯು ತಾನಾಗಿಯೇ ಗರೋಡಿಗೆ ಹೋಗಲಿ ಎಂದು ಕುದುರೆಯನ್ನು ಸಮುದ್ರಕ್ಕೆ ಎಸೆಯಲು ಆಜ್ಞಾಪಿಸುತ್ತಾರೆ. ಮರುದಿನ ಕುದುರೆಯು ಕಾಪು ಕಡಲ ಕಿನಾರೆಯಲ್ಲಿ ಗರೋಡಿಯ ಹತ್ತಿರ ಕುದುರೆಯು ತೇಲುತ್ತಿರುವದನ್ನು ಕಂಡು ಸಂಭ್ರಮದಿಂದ ಮೆರವಣಿಗೆಯಲ್ಲಿ ಗರೋಡಿಗೆ ತರಲಾಯಿತು. ಆದರೆ ಅದನ್ನು ಗರೋಡಿಯ ಒಳಗೆ ತಂದು ಪ್ರತಿಷ್ಠಾಪಿಸಲು ಗರೋಡಿಯ ದ್ವಾರವು ಚಿಕ್ಕದಾದುದರಿಂದ ಸಾಧ್ಯವಾಗದೆ, ಮರುದಿನ ದ್ವಾರ ಬದಲಾಯಿಸುವುದೆಂದು ತೀರ್ಮಾನಿಸಲಾಯಿತು. ಮರುದಿನ ಬಂದು ನೋಡುವಾಗ ಕುದುರೆ ತಾನೇ ತಾನಾಗಿ ಗರೋಡಿಯ ಒಳಗೆ ಯೋಗ್ಯ ಸ್ಥಾನದಲ್ಲಿ ಸ್ಥಾಪನೆಯಾಗಿತ್ತು. ಇಂದಿಗೂ ಕುದುರೆಯು ವರ್ಷವೂ ಗಾತ್ರದಲ್ಲಿ ಹಿರಿದಾಗುತ್ತಿರುವುದು ಇಲ್ಲಿಯ ವಿಸ್ಮಯ. ಇದೇ ಕಾರಣಕ್ಕಾಗಿ ಗರೋಡಿಯ ಮೇಲ್ಮಾಡನ್ನು ಎರಡು ಸಲ ಏರಿಸಲಾಗಿದೆ ಎಂದು ಇಲ್ಲಿಯ ಹಿರಿಯರು ಹೇಳುತ್ತಾರೆ.
ಗರೋಡಿಯ ಆವರಣದ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗು , ಕೊಳತ ಜುಮಾದಿ ದೈವಗಳ ಸಾನಿಧ್ಯ, ಅಯ್ಯಕಲ್ಲು ಹಾಗು ತುಳಸಿ ಕಟ್ಟೆಗಳಿವೆ.
ಗರೋಡಿಯ ಪರಿಸರದಲ್ಲಿ ಬ್ರಹ್ಮಲಿಂಗೇಶ್ವರ, ನಾಗಬನ, ಬೊಬ್ಬರ್ಯ, ರಕ್ತೇಶ್ವರಿ, ನಂದಿ ಪಂಜುರ್ಲಿ ದೈವಗಳ ಸಾನಿದ್ಯವಿದೆ.

ಜಗನ್ನಾಥ ಪೂಜಾರಿ ಮತ್ತು ಶ್ರೀನಿವಾಸ ಪೂಜಾರಿ

1980 ರಿಂದ ಗರೋಡಿ ಮನೆ ಜಗನ್ನಾಥ ಪೂಜಾರಿ (ಪ್ರಾಯ 65 ವರ್ಷ) ಯವರು ಈ ಗರೋಡಿಯ ಪೂ ಪೂಜನೆಯವರು. ಇವರ ಮೊದಲು 1973ರಿಂದ 1980ರ ವರೆಗೆ ಶ್ರೀನಿವಾಸ ಪೂಜಾರಿ, ಅದಕ್ಕೂ ಮೊದಲು ನಾಗಪ್ಪ ಪೂಜಾರಿ, ಕುಂಞ ಪೂಜಾರಿ, ಕೊರಗ ಪೂಜಾರಿ, ಬಸವ ಪೂಜಾರಿ, ಮೊದಲಾದ ಹಿರಿಯರು ಈ ಸೇವೆ ಮಾಡಿದ್ದರು.
ಗರೋಡಿ ಮನೆಯ ಜಗನ್ನಾಥ ಪೂಜಾರಿ ಹಾಗೂ 1976ರಿಂದ ಶ್ರೀನಿವಾಸ ಪೂಜಾರಿಯವರು ಈ ಗರೋಡಿಯ ಬೈದರ ದರ್ಶನದ ಸ್ಥಳ ಪಾತ್ರಿಗಳಾಗಿದ್ದಾರೆ. ಇವರ ಮೊದಲು ಸೋಮಯ್ಯ ಪೂಜಾರಿ ಹಾಗೂ ಕೊರಗ ಪೂಜಾರಿಯವರು ಇಲ್ಲಿಯ ಸ್ಥಳ ಪಾತ್ರಿಗಳಾಗಿದ್ದರು.
ಬೈರಗುತ್ತು ರಮೇಶ್ ಶೆಟ್ಟಿಯವರು ಗರೋಡಿಯ ಮೊಕ್ತೇಸರರು.
ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಮೊದಲಾದ ಧಾರ್ಮಿಕ ಆಚರಣೆಗಳಿವೆ. ಪ್ರತೀ ವರ್ಷದ ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಕಾಲಾವಧಿ ಅಗೆಲು ಸೇವೆ, ಬೈದರ ನೇಮೋತ್ಸವ ನಡೆಯುತ್ತದೆ. ಮರುದಿನ ಮಾಯಂದಾಲ್ ನೇಮ, ರಾತ್ರಿ ಹುಲಿ ಚಾಮುಂಡಿ, ಕೊಡಮಣಿತ್ತಾಯ ದೈವದ ಕೋಲ ನಡೆಯುತ್ತದೆ. ಕಾರ್ತಿ ತಿಂಗಳಲ್ಲಿ (ಮೇ ತಿಂಗಳ 7ನೇ ತಾರೀಖಿನಂದು) ಅನ್ನ ನೈವೇದ್ಯ ಸೇವೆ ನಡೆಯುತ್ತದೆ. ಕಾಪು, ಕೋತಾಲ್ಕಟ್ಟೆ, ತೊಟ್ಟಂ ಮೂಳೂರು, ಭಾಗಷ: ಪಾಂಗಾಳದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ಗರೋಡಿಗೆ ಬಂದು ತಿಂಗಳು ಮಾಡಿಸುವ ಕ್ರಮ, ಕಲಶ ಕಟ್ಟಿ ಶುದ್ಧ ಮಾಡುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
1977 ಹಾಗೂ 2010ರಲ್ಲಿ ಗರೋಡಿಯ ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಲಶ ನಡೆದಿದೆ.
ಶೇಖರ ಪರವ, ಉಗ್ಗಪ್ಪ ಪರವ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿ ಸೇವೆ ಮಾಡುತ್ತಿದ್ದಾರೆ.
ಗರೋಡಿಯ ನೇಮೋತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಜವಾಬ್ದಾರಿಯಿಂದ ಸ್ವಯಂ ಸೇವಕರಾಗಿ ದುಡಿಯುವ ಯುವಕ – ಯುವತಿಯರ ‘’ ಸೇವಾ ಯುವ ಸಮಿತಿ ‘’ ಇದೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಪೊಯ್ಯ
ಪೊಡಿಕಲ್ಲ ಗರೋಡಿ,
ಕಾಪು ತಾಲೂಕು,
ಉಡುಪಿ ಜಿಲ್ಲೆ.

ಪೂ ಪೂಜನೆಯವರು:

ಜಗನ್ನಾಥ ಪೂಜಾರಿ: ಮೊಬೈಲ್: 8722441126

ಮಾಹಿತಿ ಸಂಗ್ರಹಿಸಿದ ದಿನಾಂಕ:

26-09-2022

Kudrottu Shree Brahma Baidarkala Garodi, Yermal Bada

ಕುದ್ರೊಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಎರ್ಮಾಳ್ ಬಡಾ.

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.66ರಲ್ಲಿ ಉಚ್ಚಿಲ ದೇವಸ್ಥಾನದಿಂದ ಸುಮಾರು 1.28 ಕಿ. ಮೀ.ದೂರದಲ್ಲಿ ಎಡಬದಿಗಿರುವ ರಸ್ತೆಯಲ್ಲಿ ಸುಮಾರು ಅರ್ದ ಕಿ. ಮೀ. ಒಳಗೆ ಹೋದರೆ ಈ ಗರೋಡಿ ಇದೆ.
ಇದು ಆಯದ ಗರೋಡಿಯಾಗಿದ್ದು ಶಿಲಾಮಯವಾಗಿದೆ. ಷಡಾಧಾರ ಪ್ರತಿಷ್ಟೆಯಲ್ಲಿರುವ ಈ ಗರೋಡಿಯ ಮುಖ್ಯ ದ್ವಾರವು ಪಡುವಣ ದಿಕ್ಕಿಗೆ ಇದ್ದು ಇನ್ನೊಂದು ದ್ವಾರವು ಮೂಡಣ ದಿಕ್ಕಿಗೆ ಇದೆ.
ಇಲ್ಲಿನ ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಕಾಯಬಿಟ್ಟು ಮಾಯಕ್ಕೆ ಸಂದ ಬಳಿಕ ಕೋಟಿಚೆನ್ನಯರು ಅಗೋಚರ ಚೇತನರಾಗಿ ಭಕ್ತರ ಪರಿಪಾಲನೆಗೆ ಸಂಚಾರ ಹೊರಡುತ್ತಾರೆ. ಎನ್ಮೂರಿನಿಂದ ಉತ್ತರ ಕಾಶಿಗೆ ತೀರ್ಥಯಾತ್ರೆ ಹೋಗುತ್ತಿರಲು ದಾರಿ ಮಧ್ಯದಲ್ಲಿ ಕುತ್ಯಾರು ಅರಸ್ತಾನ ಕಾಣುತ್ತದೆ. ಕುತ್ಯಾರಿನಲ್ಲಿ ಕೇಂಜ ಗರೋಡಿ ಉಂಟು ಮಾಡುತ್ತಾರೆ. ಎಲ್ಲೂರಿನ ವಿಶ್ವನಾಥ ದೇವರ ದರ್ಶನ ಮಾಡಿ ಎಲ್ಲೂರು ಗರೋಡಿ ಸ್ಥಾಪಿಸುತ್ತಾರೆ. ಅಲ್ಲಿಂದ ಎರ್ಮಾಳಿನ ಶ್ರೀ ಲಕ್ಷ್ಮೀ ಜನಾರ್ಧನ ಸನ್ನಿಧಿಗೆ ಬಂದು ದೇವರ ದರ್ಶನ ಮಾಡುತ್ತಾರೆ. ಎರ್ಮಾಳಿನಲ್ಲಿ ತಮ್ಮ ಸಾನಿಧ್ಯ(ಗರೋಡಿ) ಸ್ಥಾಪಿಸುತ್ತಾರೆ.
ಎರ್ಮಾಳು ಕುದ್ರೊಟ್ಟಿನ ಮೂಲ ಗರಡಿ ಮನೆತನದ ಮನೆಯಂಗಳದಲ್ಲಿ ಮಾನವ ರೂಪಿಗಳಾಗಿ ಕಾಣಿಸಿಕೊಂಡು ಅಸರ್ ಕೇಳುತ್ತಾರೆ. ಮನೆಯವರು ಅಸರಿನೊಂದಿಗೆ ಮನೆಯೊಳಗಿನಿಂದ ಬರುವಾಗ ಕಾಯ ರೂಪಗಳು ಮರೆಯಾಗುತ್ತವೆ. ನಿಮಿತ್ತ ಕೇಳಿದಾಗ ಬೈದೇರುಗಳು ಸ್ಥಳೀಯವಾಗಿ ಮೆಚ್ಚಿ ನೆಲೆಯೂರುವ ಸಂಕಲ್ಪದ ಸೂಚನೆ ಇದೆಂದು ತಿಳಿದು ಬರುತ್ತದೆ. ಅದರ ಗೌರವ ಸೂಚಕವಾಗಿ ಕಾಲಕ್ರಮೇಣ ಅಲ್ಲಿ ಸ್ಥಳಾಭಾವ ಉಂಟಾಗುವುದೆಂದು ತೋರಿದಾಗ ಗರಡಿ ಸ್ಥಾಪನೆಯ ಸಂಕಲ್ಪ ಮೂಡುತ್ತದೆ.
ಈ ಗರೋಡಿ ಇರುವ ಪ್ರದೇಶಕ್ಕೆ ಕುದ್ರೊಟ್ಟು ಎಂಬ ಹೆಸರು ಬರಲು ಕಾರಣವಿದೆ. ಮೂಲ್ಕಿ ಸಾವಂತರ ಆಳ್ವಿಕೆ ಕಾಲ. ಕುತ್ಯಾರು, ಕಟಪಾಡಿ, ಎರ್ಮಾಳ್ ಹೀಗೆ ಕರಾವಳಿಯುದ್ದಕ್ಕೂ ಅರಸರ ಬೀಡುಗಳಿದ್ದವು. ಒಮ್ಮೆ ಕುತ್ಯಾರು ಬೀಡಿನ ಅರಸರು ಬಿಳಿ ಕುದುರೆಯ ಮೇಲೆ ಕುಳಿತು ತನ್ನ ಪತ್ನಿಯ ಮನೆಯಾದ ಎರ್ಮಾಳು ಬೀಡಿಗೆ ವಿಹಾರ ಹೋಗುವ ಸಮಯದಲ್ಲಿ ಈ ಗರೋಡಿಯ ಮೂಡು ದಿಕ್ಕಿನಲ್ಲಿ ಮೂಡುಬೆಟ್ಟು ಎಂಬಲ್ಲಿಗೆ ಬರುವಾಗ ಕುದುರೆ ಎಡವಿ ಮುಗ್ಗರಿಸಿ ದೊಗ್ಗಾಲು(ಮೊಣ ಕಾಲು) ಬೀಳುತ್ತದೆ. ಕುದುರೆಯ ಮೇಲಿಂದ ಕೆಳಗುರುಳಿ ಸ್ಮೃತಿ ತಪ್ಪಿದ ಸಮಯ ಅರಸರಿಗೆ ಇಬ್ಬರು ಕಾರಣಿಕ ಪುರುಷರು ನಿಜ ರೂಪದಲ್ಲಿ ಅಲೌಕಿಕ ದರ್ಶನ ನೀಡಿದ ಅನುಭವವಾಗುತ್ತದೆ. ಮೂರ್ಚೆಯಿಂದೆದ್ದ ಅರಸರು ಸುತ್ತ ನೆರೆದಿದ್ದ ತನ್ನ ಪರಿವಾರ ಸೇವಕರಲ್ಲಿ ಈ ವಿಶೇಷ ಅಲೌಕಿಕ ಘಟನೆಯ ಬಗ್ಗೆ ಹೇಳಿ ಇದರಲ್ಲೇನೋ ವಿಶೇಷವಿರಬೇಕು ಎಂದರು. ಬೈದರ್ಕಳ ಕಾರ್ಣಿಕ ಶಕ್ತಿಗಳು ಸ್ಥಳೀಯವಾಗಿ 16 ಕೋಲು ಆಯದ ಗರಡಿಯಲ್ಲಿ ನೆಲೆಯಾಗಿರುವ ಸಂಕಲ್ಪವಿರುವುದಾಗಿ ಅಲ್ಲಿ ನೆರೆದವರ ಚಿಂತನೆಯಲ್ಲಿ ತಿಳಿಯಿತು.
ಭಕ್ತರ ಮೂಲಕವಾಗಿ ಅರಸರು ಬೈದೇರುಗಳನ್ನು ಪ್ರಾರ್ಥಿಸಿದರು. ಅವರ ಕುದುರೆಯ ಕಾಲು ನೋವು ಮಾಯವಾಗಿ ಎದ್ದು ನಿಂತಿತು. ಅರಸು ಬಳ್ಳಾಲರು ಊರಿನ ಹತ್ತು ಸಮಸ್ತರನ್ನು ಒಟ್ಟು ಸೇರಿಸಿ ವಿಚಾರ ವಿನಿಮಯ ಮಾಡಿದರು. ಭಕ್ತರೊಬ್ಬರಿಗೆ ದರ್ಶನಾವೇಶವಾಗಿ ಹಾರಿಸಿದ ಕಲ್ಪಫಲವು (ತೆಂಗಿನ ಕಾಯಿ) ಈಗ ಗರಡಿಯಿರುವ ಜಾಗದಲ್ಲಿ ಎಂದರೆ ಮೂಡಬೆಟ್ಟು ತುಂಬೆನ್ನೇಯ ಪರಿಸರ ಜಾಗದಲ್ಲಿ ಬಂದು ಬಿತ್ತು. 16 ಕೋಲು ಆಯದ ಗರಡಿಯನ್ನು ನಿರ್ಮಾಣ ಮಾಡಲಾಯಿತು. ಅರಸರು ಈ ಜಮೀನನ್ನು ಗರಡಿಗೆ ಉಂಬಳಿ ನೀಡಿದರು. ಆರಾಧನೆಗಾಗಿ ಸ್ಥಳೀಯ ಚನಿಲ ಬನ್ನಾಯ (ಸನಿಲ್) ಮನೆತನದವರನ್ನು ನೇಮಿಸಿದರು. ಕುದುರೆ ಬಿದ್ದ ಬೆಟ್ಟು ಸ್ಥಳವು ಕುದುರೆಬೆಟ್ಟು – ಕುದುರೊಟ್ಟು ಎಂಬುದಾಗಿ ಪ್ರತೀತಿಗೆ ಬಂತು. ಹಿಂದೆ ಗರೋಡಿಯ ಸ್ಥಳ ಮರ್ಯಾದೆ ಕುತ್ಯಾರು ಬೀಡಿಗೆ ಸಂದಾಯವಾಗುತ್ತಿತ್ತು. ಕಾಲಾಂತರದಲ್ಲಿ ಅದು ಎರ್ಮಾಳು ಬೀಡಿಗೆ ವರ್ಗಾವಣೆ ಹೊಂದಿತು.
ಚನಿಲ ಬನ್ನಾಯ ಅಥವಾ ಸನಿಲ್ ಸಂತತಿಯ ಮನೆತನ “ನಾಯ್ಗ” ರೆಂಬ ಅಭಿದಾನ ಹೊಂದಿದವರು. ಅಲೂಪ ವಂಶ ಮತ್ತು ವಿಜಯನಗರ ಆಳ್ವಿಕೆಯ ಕಾಲದಿಂದಲೂ ತುಳುನಾಡಿನಲ್ಲಿ ಕೆಲವು ಬಿಲ್ಲವ ಮನೆತನಗಳಿಗೆ ನಾಯಕ (ಸೇನಾ ನಾಯಕ ಇತ್ಯಾದಿ) ರೆಂಬ ನೆಲೆಯಲ್ಲಿ ನಾಯ್ಗ ಎಂಬ ಹೆಸರಿದ್ದಿತು. ಅಂಥವರಲ್ಲಿ ಹಳೆಯಂಗಡಿ ಬಂಕಿ ನಾಯ್ಕ, ಉಳಿಪಾಡಿ ಗುಡ್ಡೆ ನಾಯ್ಗ, ಕಾರ್ನಾಡಿನ ಮಾಗಂದಡಿ ನಾಯ್ಗ, ಮುಂತಾದುವು ಪ್ರಖ್ಯಾತ ಮನೆತನಗಳು.
ಸುಮಾರು 150 – 200 ವರ್ಷಗಳ ಹಿಂದಿನವರಾದ ಬಸ ನಾಯ್ಗ ಎಂಬವರು ಈ ಚನಿಲ ಬನ್ನಾಯನ ಮನೆತನದ ಅಂದಿನ ಹಿರಿಯರು, ಧೂಮ ನಾಯ್ಗ, ಅಂಗರ ನಾಯ್ಗ, ಅಣ್ಣಪ್ಪ ನಾಯ್ಗ, ಮೈಂದಪ್ಪ ನಾಯ್ಗ, ಮುದ್ದು ನಾಯ್ಗ, ಗಿರಿಯಪ್ಪ ನಾಯ್ಗ, ಮೊದಲಾದವರು ಪ್ರಮುಖರು.
ಪೂ ಪೂಜನೆಯಲ್ಲಿ ಈ ಮನೆತನದ ಈಗಿನ ಪೂ ಪೂಜನೆಯವರು ಸದಾನಂದ ನಾಯ್ಗರು. ಇದು ಊರಿನಲ್ಲಿ ಒಂದನೇ ಸ್ಥಾನದ ಮನೆ. ಇದು ನಡಿಕೆರೆ, ಉಚ್ಚಿಲಕರೆ, ತೋಟದಕರೆ, ಮೂಡುಬೆಟ್ಟು ಕರೆಗಳ ಕೂಡುಕಟ್ಟಿಗೆ ಸೇರಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಅಶ್ವರೂಢನಾದ ನಾಗ ಬ್ರಹ್ಮರ ಸ್ವರ್ಣಕವಚವಿರುವ ಪಂಚಲೋಹದ ಮೂರ್ತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆಯಿದೆ.
ಬ್ರಹ್ಮ ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮರದ ಪಾಪೆಯಿದೆ. ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಒಕ್ಕು ಬಲ್ಲಾಳರ ಸಾನಿಧ್ಯವಿದೆ. ಅದರ ಎಡಭಾಗದಲ್ಲಿ ತೂಗು ಮಣೆ ಮಂಚದಲ್ಲಿ ಕೊಡಮಣಿತ್ತಾಯ ಮತ್ತು ಹುಲಿಚಾಮುಂಡಿ ದೈವಗಳ ಸಾನಿಧ್ಯವಿದೆ.
ಬ್ರಹ್ಮ ಗುಡಿಯ ಪ್ರವೇಶ ದ್ವಾರದಲ್ಲಿ ದ್ವಾರ ಪಾಲಕರ ಮರದ ಪಾಪೆಗಳಿವೆ.
ಬ್ರಹ್ಮ ಗುಡಿಯ ಹೊರಗೆ ಚಾವಡಿಯ ಬಲಭಾಗದಲ್ಲಿ ಮಣೆ ಮಂಚದಲ್ಲಿ ಜೋಗಿ ಪುರುಷ, ಮಾಯಂದಾಳ್ ಮತ್ತು ಮಗುವಿನ ಮರದ ಪಾಪೆ ಹಾಗೂ ಬ್ರಹ್ಮ ಗುಡಿಯ ಎದುರು ಗುರುಕಂಭವಿದೆ.
ಗರೋಡಿಯ ಆವರಣದಲ್ಲಿ ಸ್ಥಳದ ಪಂಜುರ್ಲಿ, ಮರ್ಲ್ ಧೂಮಾವತಿ, ಹಾಗೂ ನಾಗಬನವಿದೆ. ಅಯ್ಯಕಲ್ಲು, ಅಶ್ವಸ್ಥ ಕಟ್ಟೆ, ತುಳಸೀಕಟ್ಟೆಗಳು ಇವೆ
ಗರೋಡಿಯಲ್ಲಿ ನಿತ್ಯಪೂಜೆ, ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆಗಳು ನಡೆಯುತ್ತವೆ. ಸೋಣ ತಿಂಗಳಲ್ಲಿ ಹೂವಿನ ಪೂಜಡ ನಡೆಯುತ್ತದೆ. ಸೋಣ ಸಂಕ್ರಾಂತಿಯಂದು ಕಜ್ಜಾಯ ಸೇವೆಯಿದೆ. ಪ್ರತೀ ವರ್ಷ ಪೆರಾರ್ದೆ ತಿಂಗಳಲ್ಲಿ ಪೊಸಬಾರ ಅಗೆಲ್, ನೇಮೋತ್ಸವ, ಮಾಯಂದಾಳ್ ನೇಮ, ಶುದ್ಧದ ಅಗೆಲ್ ನಡೆಯುತ್ತದೆ.
ಇಲ್ಲಿನ ಆಡಳಿತ ಮೂಡುಕರೆ, ನಡುಕೆರೆ, ಉಚ್ಚಿಲಕರೆ, ತೋಟಕರೆ ಹೀಗೆ ನಾಲ್ಕು ಕರೆ ಬಿಲ್ಲವ ಸಮುದಾಯದ ಸಹಕಾರ, ಹಿರಿಯರ ಮಾರ್ಗದರ್ಶನ, ಯುವಜನರ ದುಡಿಮೆ, ಪರಿಶ್ರಮದಿಂದ ಊರ ಪರವೂರ ಜನರ ಸಹಕಾರದಿಂದ ನಡೆಯುತ್ತದೆ. ಗರೋಡಿಗೆ ಆಡಳಿತ ಸಮಿತಿಯೂ ಇದೆ.
ಗರೋಡಿಯು 1974 ಜೀರ್ಣೋದ್ಧಾರಗೊಳ್ಳುವ ಮೊದಲು 12 ವರ್ಷಗಳ ಕಾಲ ಪಾಳು ಬಿದ್ದಿತ್ತು. ನಂತರ 2013 ರಲ್ಲಿ ಜೀರ್ಣೋದ್ಧಾರವಾಗಿದೆ.
ಗರೋಡಿಯಲ್ಲಿ ಈಗ ಬೈದದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಹಿಂದೆ ಬಬ್ಬು ಪೂಜಾರಿ ಎಂಬವರು ಸ್ಥಳ ಪಾತ್ರಿಗಳಿದ್ದರು.
ಬೊಗ್ಗು ಪರವ, ಸಂತೋಷ ಪರವ ಮತ್ತು ಸಂಘಡಿಗರು ಈ ಗರೋಡಿಯ ನೃತ್ಯ ವಿಶಾರದರಾಗಿದ್ದಾರೆ.
ಗರೋಡಿಗೆ ಸಂಬಂಧಪಟ್ಟು ಬಿಲ್ಲವ ಯೂನಿಯನ್ ಎರ್ಮಾಳು ಕಾರ್ಯನಿರ್ವಹಿಸುತ್ತದೆ.

ಗರೋಡಿಯ ವಿಳಾಸ:

ಕುದ್ರೊಟ್ಟು ಶ್ರೀ ಬ್ರಹ್ಮ ಬೈದರ್ಕಳ
ಗರೋಡಿ ಎರ್ಮಾಳ್ ಬಡಾ,
ಪೋಸ್ಟ್ ಎರ್ಮಾಳ್,
ಕಾಪು ತಾಲೂಕು,
ಉಡುಪಿ ಜಿಲ್ಲೆ. 574119.

ಗರೋಡಿಯ ಮೊಕ್ತೇಸರ ಮತ್ತು ಪೂ ಪೂಜನೆಯವರು:

ಸದಾನಂದ ಪೂಜಾರಿ 9964006366.

ಮಾಹಿತಿ ಸಂಗ್ರಹಿಸಿದ ದಿನಾಂಕ:

10-10-2022

Shree Brahma Baidarkala Garodi, Pangala Gudde, Pangala

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಪಾಂಗಾಳ ಗುಡ್ಡೆ, ಪಾಂಗಾಳ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್.ಎಚ್.66ರಲ್ಲಿ ಪಾಂಗಾಳ ಸೇತುವೆಯ ಮೊದಲು ಬಲಕ್ಕೆ ತಿರುಗಿ ಪಡುವಣ ದಿಕ್ಕಿಗೆ ಹೋಗುವ ರಸ್ತೆಯಲ್ಲಿ ಸುಮಾರು 1.5 ಕಿ. ಮೀ. ದೂರ ಸಾಗಿದಾಗ ರಸ್ತೆಯ ಎಡಭಾಗದಲ್ಲಿ ಗದ್ದೆಗಳ ನಡುವೆ ಪಾಂಗಾಳ ಗುಡ್ಡೆ ಗರೋಡಿ ಇದೆ.
ಇದು ಆಯದ ಗರೋಡಿಯಾಗಿದ್ದು ಷಡಾಧಾರ ಪ್ರತಿಷ್ಠೆಯಾಗಿದೆ. ಗರೋಡಿಗೆ ಎರಡು ದ್ವಾರಗಳಿದ್ದು ಮುಖ್ಯ ದ್ವಾರವು ಪೂರ್ವಾಭಿಮುಖವಾಗಿಯೂ ಇನ್ನೊಂದು ದ್ವಾರವು ಪಶ್ಚಿಮಕ್ಕೂ ಇದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ ಕಲ್ಲುಗುಡ್ಡೆ ಗರೋಡಿಯ ನೇಮೋತ್ಸವಕ್ಕೆ ಹೋದ ಅಮ್ಮಣ್ಣ ಬನ್ನಾಯ ಬೆರ್ಮಣ್ಣ ಬೈದರೆಂಬ ಹಿರಿಯರ ಹಿಂದೆ ಬಂದ ಕೋಟಿಚೆನ್ನಯರು, ಸೋಣ ತಿಂಗಳ ಹುಣ್ಣಿಮೆಯ ಬಹುಳಾಷ್ಟಮಿಯಂದು ಮಂಗಳವಾರದ ದಿನ ಸೂರ್ಯೋದಯದ ಹೊತ್ತಿಗೆ ಇಲ್ಲಿಯ ಗರೋಡಿಯಲ್ಲಿ ಬಂದು ನೆಲೆಸಿದರು. ಆ ನಂತರ ಇಲ್ಲಿ ಗರೋಡಿ ನಿರ್ಮಾಣವಾಯಿತು.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬಂಗಾರ ಹಾಗೂ ಬೆಳ್ಳಿ ಮುಚ್ಚಿದ ಕುದುರೆಯೇರಿ ಕುಳಿತ ನಾಗ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ಥಿನಲ್ಲಿ ಗಾಳಿ ದೇವರ ಬಂಗಾರದ ಕವಚವಿರುವ ಮರದ ಮೂರ್ತಿಯಿದೆ.
ಬ್ರಹ್ಮ ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮತ್ತು ಇಬ್ಬರು ಮಕ್ಕಳ ಮರದ ಪಾಪೆಗಳಿವೆ.
ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವರ ಮರದ ಪಾಪೆ, ಕುದುರೆ ಮೇಲೆ ಕುಳಿತ ಒಕ್ಕು ಬಲ್ಲಾಳರ ಮರದ ಪಾಪೆಗಳಿವೆ. ಬ್ರಹ್ಮ ಗುಂಡದ ಹಿಂಭಾಗದಲ್ಲಿ ಗುರುಕಂಭದ ಆರಾಧನೆಯಿದೆ.

ಬ್ರಹ್ಮ ಗುಡಿಯ ಹೊರಗೆ ಚಾವಡಿಯ ಬಲಭಾಗದಲ್ಲಿ ಪಿಲ್ಚಂಡಿ ಹಾಗೂ ಬಂಟರ ಮಣೆ ಮಂಚ, ಎಡಭಾಗದಲ್ಲಿ ಜೋಗಿಪುರುಷರ ಮರದ ಪಾಪೆ ಹಾಗೂ ಮಣೆ ಮಂಚದಲ್ಲಿ ಜುಮಾದಿ, ಬಂಟ ಹಾಗೂ ಪಂಜುರ್ಲಿ ದೈವಗಳಿಗೆ ಪೂಜೆ ನಡೆಯುತ್ತದೆ.

ಬ್ರಹ್ಮ ಗುಡಿಯ ಎದುರು ಮರದ ಕುದುರೆ ಹಾಗು ಇನ್ನೊಂದು ಗುರುಕಂಬದ ಆರಾಧನೆ ಇದೆ.
ಗರೋಡಿಯ ಎದುರು ಕಟ್ಟೆಯಲ್ಲಿ ರಕ್ತೇಶ್ವರಿ ಹಾಗೂ ಕ್ಷೇತ್ರಪಾಲ ದೈವಗಳ ಸಾನಿಧ್ಯವಿದೆ.
ಗರೋಡಿಯ ಎದರು ಬಲಭಾಗದ ಗುಡಿಯಲ್ಲಿ ಮೈಸಂದಾಯ, ನಂದಿಗೋಣ, ಅಮ್ಮಣ್ಣ ಬನ್ನಾಯ, ಬೆರ್ಮಣ ಬೈದ, ಓಲೆದ ಮಾಣಿ, ಪೊಟ್ಟು ದೈವಗಳ ಮರದ ಮೂರ್ತಿ ಇದೆ.
ಎಡಭಾಗದ ಗುಡಿಯಲ್ಲಿ ಮಾಯಂದಾಲ್ ಮತ್ತು ಮಗು, ಕೊಳತ ಜುಮಾದಿಯ ಮರಸ ಪಾಪೆಗಳಿವೆ.
ಗರಡಿಯ ಆವರಣಕ್ಕೆ ತಾಗಿ, ನಾಗಬನ, ನಾಗಬ್ರಹ್ಮ, ಮತ್ತು ಬೊಬ್ಬರ್ಯ ದೈವಗಳ ಸಾನಿಧ್ಯವಿದೆ. ಗರಡಿಯ ಎದುರು ಅಶ್ವತ್ತಕಟ್ಟೆ ಹಾಗೂ ನಾಗಬನಗಳಿವೆ.

ಜಯ ಡಿ ಅಮೀನ್

1975ರಿಂದ ಜಯ ಡಿ ಅಮೀನರು ಪೂ ಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ಶೀನ ಪೂಜಾರಿ, ಸೂರು ಪೂಜಾರಿ, ಇಸರ ಪೂಜಾರಿ, ಬೊಗ್ರ ಪೂಜಾರಿ, ಬೀರು ಪೂಜಾರಿ, ಬೀರಣ್ಣ ಪೂಜಾರಿ ಮೊದಲಾದ ಹಿರಿಯರು ಈ ಸೇವೆ ಮಾಡುತ್ತಿದ್ದರು.

ಗರೋಡಿ ಮನೆ ಶೇಖರ ಜಿ ಅಮೀನರು ಗರೋಡಿಯ ಮೊಕ್ತೇಸರರು. ಹಿಂದೆ ಅವರ ತಂದೆ ಗುರುವ ಅಮೀನ್ ಮೊಕ್ತೇಸರರಾಗಿದ್ದರು.

ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ(ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಜನವರಿ ತಿಂಗಳ ಕೊನೆಯಲ್ಲಿ ಅಗೆಲು ಸೇವೆ, ಮರುದಿನ ಬೈದೇರುಗಳ ನೇಮೋತ್ಸವ, ಜೋಗಿ ಪುರುಷ ಕೋಲ, ಅದರ ಮರುದಿನ ಮಾಯಂದಾಲ್ ಕೋಲ, ಜುಮಾದಿ ಬಂಟ ಕೋಲ, ಪಿಲ್ಚಂಡಿ ಕೋಲ ನಡೆಯುತ್ತದೆ.

ಪಾಂಗಾಳ ಗ್ರಾಮದ ಗುಡ್ಡೆ ಹಾಗೂ ಆರ‍್ಯಾಡಿ ಊರುಗಳ ಮನೆಗಳು ಈ ಗರೋಡಿಯ ಮನೆಗಳು ಈ ಕೂಡುಕಟ್ಟಿಗೆ ಸೇರಿವೆ. ಊರ ಜನರು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರವರ ಹರಕೆ, ಕಾಣಿಕಡಯಿಂದ ಭರಿಸಲಾಗುತ್ತದೆ.

24.04.1955ರಲ್ಲಿ ಗುರುವಪ್ಪ ಜೆ ಅಮೀನ್ ರಿಂದ ಗರೋಡಿಯ ಜೀರ್ಣೋದ್ಧಾರವಾಗಿದ್ದು, ಅಲ್ಲಿಯವರೆಗೆ ಇದ್ದ ಮುಳಿಯ ಮಾಡನ್ನು ತೆಗೆದು ಹಂಚು ಹಾಕಲಾಯಿತು.

ಗುರುವಪ್ಪ ಜೆ ಅಮೀನ್

ಜಯ ಪರವ ನೀರೆ ಮತ್ತು ಸಂಘಡಿಗರು ನೃತ್ಯ ವಿಶಾರದರಾಗಿ, ಜಯ ಮಡಿವಾಳ ಉದ್ಯಾವರ ಇವರು ಮಡಿವಾಳರಾಗಿ, ಅಕ್ಬರ್ ಸಾಹೇಬ್ ಕಾಪು ಇವರು ವಾದ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಪಾಂಗಾಳ ಗುಡ್ಡೆ, ಪಾಂಗಾಳ ಅಂಚೆ,
ಕಾಪು ತಾಲೂಕು ಉಡುಪಿ 576122.

ಮಾಹಿತಿ ಸಂಗ್ರಹಿಸಿದ ದಿನಾಂಕ:

04-12-2024

Moodraguttu Mane Garodi

ಮೂಡ್ರಗುತ್ತು ಮನೆ ಗರೋಡಿ ಅಡ್ವೆ

ಉಡುಪಿಯಿಂದ ಪಡುಬಿದ್ರಿ ತಲುಪಿ, ಪಡುಬಿದ್ರಿ – ಕಾರ್ಕಳ ಮಾರ್ಗದಲ್ಲಿ ಅಡ್ವೆ ಗರೋಡಿಯ ನಂತರ ಸುಮಾರು 200ಮೀಟರ್ ದೂರದಲ್ಲಿ ಎಡಕ್ಕೆ ತಿರುಗಿ ಒಳ ಮಾರ್ಗದಲ್ಲಿ ಸುಮಾರು 250ಮೀಟರ್ ದೂರದಲ್ಲಿ ಮೂಡ್ರಗುತ್ತು ಮನೆ ಗರೋಡಿ ಇದೆ.
ಕೋಟಿಚೆನ್ನಯರು ಮೂಡ್ರಗುತ್ತು ಮನೆಯ ಹತ್ತಿರದಲ್ಲೇ ಇರುವ ಚೆಕ್ ಪಾದೆಯಲ್ಲಿ ನಿಂತು ಮೂಡ್ರಗುತ್ತಿನ ಯಜಮಾನರನ್ನು ಕರೆದಾಗ ಅವರು ಅಸಡ್ಡೆ ತೋರಿ ತಾನು ಹೊರ ಬರದೆ ಮನೆಯ ಹೆಂಗಸರನ್ನು ನೋಡಲು ಕಳುಹಿಸಿದ್ದರಿಂದ ಆ ಮನೆಯಲ್ಲಿ ಹೆಣ್ಣು ಸಂತಾನವೇ ಆಗುಬಂತೆ ಶಾಪಗ್ರಸ್ತವಾಯಿತು. ರಾತ್ರಿ ಯಜಮಾನನಿಗೆ ಕೋಟಿಚೆನ್ನಯರು ಕನಸಿನಲ್ಲಿ ಬಂದು ಆದೇಶವಿತ್ತಂತೆ ಬಿಲ್ಲವನೋರ್ವನು ಆವೇಶದಲ್ಲಿ ತೆಂಗಿನ ಕಾಯಿ ಹಾರಿಸಿ ಅದು ಬಿದ್ದ ಸ್ಥಳದಲ್ಲಿ ಮುಂದೆ ಅಡ್ವೆ ಗರೋಡಿಯ ನಿರ್ಮಾಣವಾಯಿತು. ಮೂಡ್ರಗುತ್ತು ಮನೆಯ ಪಕ್ಕದಲ್ಲಿರುವ ಚೆಕ್ ಪಾದೆಯಲ್ಲಿ ಕೋಟಿಚೆನ್ನಯರು ಬಂದ ಕುರುಹಾಗಿ ಅವರ ಪಾದದ ಅಚ್ಚು ಇದೆಯಂತೆ. ಮುಳ್ಳುಗಂಟಿಗಳಿಂದ ಆವೃತವಾದಿರುವುದರಿಂದ ಪಾದೆಯ ಮೇಲೆ ಹೋಗುವಂತಿರಲಿಲ್ಲ.
ಮೂಡ್ರಗುತ್ತಿನ ಮನೆಯಲ್ಲಿ ಕೋಟಿಚೆನ್ನಯರಿಗ ಮಣೆ ಮಂಚದಲ್ಲಿ ಎರಡು ಗಿಂಡೆ ಹಾಗೂ ದೀಪಗಳನ್ನಿಟ್ಟು ಈಗಲೂ ಆರಾಧನೆಯಿದೆ.

ಸುಮಾರು 6ಕವರುಗಳಲ್ಲಿ 700ಜನರಿರುವ ಮೂಡ್ರಗುತ್ತಿನ ಕುಟುಂಬಸ್ಥರ ಈ ಮನೆಯಲ್ಲಿ ಈಗ ಶ್ರೀಮತಿ ಪ್ರೇಮಾ ಎಸ್ ಶೆಟ್ಟಿ ಹಾಗೂ ಮಗ ವಿಜಯ ಶೆಟ್ಟಿ ಇವರು ವಾಸ್ತವ್ಯವಿದ್ದಾರೆ.

ಮನೆಯ ಚಾವಡಿಯಲ್ಲಿ ಪ್ರತ್ಯೇಕ ಗುಡಿಯ ಒಳಗಿನ ಉಯ್ಯಾಲೆಯಲ್ಲಿರುವ ಕೋಟಿಚೆನ್ನಯರ ಪ್ರತೀಕವಾಗಿ ಎರಡು ಗಿಂಡೆಗಳಿಗೆ ದಿನಕ್ಕೆ ಎರಡು ಸಲ ಪೂಜೆ, ಸಂಕ್ರಾಂತಿ ಪೂಜೆ, ಚೌತಿ, ಅಷ್ಟಮಿ, ಹಾಗೂ ದೀಪಾವಳಿ ಹಬ್ಬಗಳಂದು ಪೂಜೆ ನಡೆಯುತ್ತದೆ.

ಹಿಂದೆ ಇಲ್ಲಿ ಬೈದೇರುಗಳಿಗೆ ಅಗೆಲು ಸೇವೆ ನಡೆಯುತ್ತಿತ್ತು ಎಂದು ಪ್ರೇಮಾ ಶೆಟ್ಟಿಯವರು ನೆನಪಿಸಿಕೊಂಡು ಈಗ ಸುಮಾರು ಇಪ್ಪತ್ತು ವರ್ಷಗಳಿಂದ ಈ ಸೇವೆಯು ನಡೆಯುತ್ತಿಲ್ಲ ಎನ್ನುತ್ತಾರೆ.

ಮನೆಯ ವಿಳಾಸ:

ಮೂಡ್ರಗುತ್ತು ಮನಡ ಗರೋಡಿ ಅಡ್ವೆ,
ಅಡ್ವೆ ಮೂಡ್ರಗುತ್ತು, ನಂದಿಕೂರು ಗ್ರಾಮ,
ಉಡುಪಿ 574111
ಮೊಬೈಲ್: ಪ್ರೇಮಾ ಎಸ್ ಶೆಟ್ಟಿ – 9320134808
ವಿಜಯ ಶೆಟ್ಟಿ – 9082918510

ಮಾಹಿತಿ ಸಂಗ್ರಹಿಸಿದ ದಿನಾಂಕ:

04-12-2024

Santoor-Kodangala Shree Brahma Baidarkala Garodi

ಸಾಂತೂರು – ಕೊಡಂಗಳ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ

ಉಡುಪಿಯಿಂದ ಎರ್ಮಾಳು ಮುದರಂಗಡಿ ತಲುಪಿ, ಮುದರಂಗಡಿಯಿಂದ ಸುಮಾರು 7 ಕಿ.ಮೀ.ದೂರದಲ್ಲಿ ಈ ಗರೋಡಿ ಇದೆ.
ಇದು ಆಯದ ಗರೋಡಿಯಾಗಿದ್ದು ಮುಖ್ಯ ದ್ವಾರವು ಪೂರ್ವಕ್ಕೂ ಇನ್ನೊಂದು ದ್ವಾರವು ಉತ್ತರ ದಿಕ್ಕಿಗೂ ಇದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಪಂಚ ಲೋಹದ ಬೆಳ್ಳಿಯ ಪ್ರಭಾವಳಿ ಇರುವ ಕುದುರೆಯೇರಿ ಕುಳಿತ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರಿಗೆ ಕೂಚಿ ಹಾಗೂ ದೀಪವನ್ನಿಟ್ಟು ಆರಾಧನೆ ಇದೆ.
ಗುಂಡದ ಎಡಬದಿಯಲ್ಲಿ ಕೋಟಿಚೆನ್ನಯರ ಹಾಗೂ ಕುಜುಂಬ ಕಾಂಜವರ ಮಣೆ ಮಂಚವಿದೆ.
ಗುಂಡದ ಬಲಭಾಗದಲ್ಲಿ ಜೋಗಿ ಪುರುಷ ಹಾಗೂ ಒಕ್ಕುಬಲ್ಲಾಳರ ಮಣೆ ಮಂಚವಿದೆ.

ಬ್ರಹ್ಮ ಗುಡಿಯ ಹೊರಗೆ ವಾಲಗ ಚಾವಡಿಯಲ್ಲಿ ಬಲಬದಿಯಲ್ಲಿ ಮಣೆ ಮಂಚದಲ್ಲಿ ಪಿಲ್ಚಂಡಿ, ಎಡಬದಿಯಲ್ಲಿ ಮಣೆ ಮಂಚದಲ್ಲಿ ಕೊಡಮಣಿತ್ತಾಯ ಹಾಗೂ ಜಾರಂದಾಯ ದೈವಗಳಿಗೆ ಪೂಜೆಯಿದೆ. ಬ್ರಹ್ಮ ಗುಡಿಯ ಎಡಭಾಗದಲ್ಲಿ ಮಾಯಂದಾಳ್ ಹಾಗೂ ಮಗುವಿನ ಮರದ ಪಾಪೆಯಿದೆ.

ಬ್ರಹ್ಮಗುಡಿಯ ಎದುರಿಗೆ ಉತ್ತದಿಕ್ಕಿನಲ್ಲಿ ಗುರುಕಂಭಕ್ಕೂ ಪೂಜೆ ಇದೆ.
ಗರೋಡಿಯ ಆವರಣದೊಳಗೆ ತುಳಸೀಕಟ್ಟೆ, ಅಯ್ಯಕಲ್ಲು, ಹಾಗೂ ಪಾರಿಜಾತ ಹಾಗೂ ಸಂಪಿಗೆ ಮರಗಳಿರುವ ಕಟ್ಟೆಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವೂ ಇದೆ.

ಭರತ್ ಪೂಜಾರಿ

ಮಾರ್ಚ್ 8, 2018ರಿಂದ ಭರತ್ ಪೂಜಾರಿಯಾನೆ ರಾಜು ಪೂಜಾರಿಯವರು ಪೂ ಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರಿಗಿಂತ ಮೊದಲು ನಾರಾಯಣ ಪೂಜಾರಿ, ಬೇಚು ಪೂಜಾರಿ, ಕೋಟಿ ಪೂಜಾರಿಯವರು ಈ ಸೇವೆ ಮಾಡುತ್ತಿದ್ದರು. ಬೈದೇರುಗಳ ದರ್ಶನಕ್ಕೆ ಸ್ಥಳ ಪಾತ್ರಿ ಇಲ್ಲಿ ಇಲ್ಲ.

ಗರೋಡಿಯಲ್ಲಿ ದಿನವೂ ದೀಪ ಹಾಕುತ್ತಾರೆ. ಸಂಕ್ರಾಂತಿ ಪೂಜೆ,(ಸೂಡ) ಚೌತಿ ಪೂಜೆ,ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ತುಳುವಿನ ಮಾಯಿ ತಿಂಗಳ ಹುಣ್ಣಿಮೆಯ ನಂತರದ ಏಕಾದಶಿಯಂದು ಗರೋಡಿ ಪ್ರವೇಶ, ಮರುದಿನ ಅಗೆಲು ಸೇವೆ, ಅದರ ಮರುದಿನ ಬೈದೇರುಗಳ ನೇಮ, ಜೋಗಿಪುರುಷ ಕೋಲ, ಅದರ ಮರುದಿನ ಮಾಯಂದಾಲ್ ನೇಮ ನಡೆಯುತ್ತದೆ.

ಗರೋಡಿಯಿಂದ ಸುಮಾರು 4ಕಿ.ಮೀ. ದೂರದಲ್ಲಿರುವ ಆಲ್‌ಉರಿ ಬ್ರಹ್ಮ ಸ್ಥಾನದಲ್ಲಿ 12ವರ್ಷಕ್ಕೊಮ್ಮೆ ಕೋಲ ನಡೆಯುವಾಗ ಗರೋಡಿಯಲ್ಲಿ ಅಗೆಲು ಸೇವೆ ನಡೆದ ನಂತರ ಬೈದೇರುಗಳು ದರ್ಶನದಿದಲ್ಲಿ ಬ್ರಹ್ಮಸ್ಥಾನದವರೆಗೆ ನಡೆದುಕೊಂಡು ಹೋಗಿ ಬೇಟಿಕೊಡುವ ಸಂಪ್ರದಾಯವಿದೆ. ಅಂದು ರಾತ್ರಿ ಜುಮಾದಿ ಮತ್ತು ಬಂಟ, ಜಾರಂದಾಯ ಮತ್ತು ಬಂಟ ಹಾಗೂ ಕೊಡಮಣಿತ್ತಾಯ ದೈವಗಳ ಕೋಲ ನಡೆದ ನಂತರ ಬೇರೆ ಚಪ್ಪರದಲ್ಲಿ ಬೈದೇರುಗಳ ನೇಮ ನಡೆದು ನಂತರ ಪುನ: ದರ್ಶನದಲ್ಲಿ ಹಿಂದೆ ಗರೋಡಿಗೆ ಬರುವುದು. 2011ರಲ್ಲಿ ಕೋಲ ನಡೆದಿದೆ.

ಸಾಂತೂರು ಹಾಗೂ ಪಿಲಾರ್ ಊರುಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಗಿದ್ದು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮುಂತಾದ ಹರಕೆ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರವರ ವರಡ ವಂತಿಗೆ ಕಾಣಿಕೆ ದೇಣಿಗೆಗಳಿಂದ ಭರಿಸಲಾಗುತ್ತದೆ.

11-03-2006ರಲ್ಲಿ ಮಾಯಂದಾಲ್ ಮತ್ತು ಮದುವಿನ ಮರದ ಪಾಪೆಗಳ ಪ್ರತಿಷ್ಠೆ ನಡೆದಿದೆ. 28-02-2007ರಲ್ಲಿ ಚಪ್ಪರದ ನಿರ್ಮಾಣವಾಗಿದೆ.

ಸಂತೋಷ ಪರವ ನೀರೆ ಮತ್ತು ಸಂಘಟಿಗರು ಈ ಗರೋಡಿಯಬ ನೃತ್ಯ ವಿಶಾರದರಾಗಿ ರಮೇಶ ಮಡಿವಾಳ ಮಡಿವಾಳರಾಗಿ, ಶಮ್ಮಿ ಗಫೂರ್ ಮುದರಂಗಡಿ ಇವರು ವಾದ್ಯದವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗರೋಡಿಗೆ ಸಂಬಂಧಪಟ್ಟ ಕೊಡಂಗಳ ಗರೋಡಿ ಮಹಿಳಾಮಂಡಲ, ಕೊಡಂಗಳ ಗರೋಡಿ ಭಕ್ತವೃಂದಗಳೆಂಬ ಎರಡು ಸಂಘಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.

ಗರೋಡಿಯ ವಿಳಾಸ:

ಸಾಂತೂರು ಕೊಡಂಗಳ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಹಲಸಿನಕಟ್ಟೆ ಅಂಚೆ, ಕಾಪು ತಾಲೂಕು ಉಡುಪಿ – 574113
ಭರತ್ ಯಾನೆ ರಾಜು ಪೂಜಾರಿ – 9611394497

ಮಾಹಿತಿ ಸಂಗ್ರಹಿಸಿದ ದಿನಾಂಕ:

04-12-2024

Shree Brahma Baidarkala Garodi, Moodubelle

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಮೂಡುಬೆಳ್ಳೆ

ಉಡುಪಿಯಿಂದ ಕಟಪಾಡಿ ಸುಭಾಷ್‌ನಗರ ಮಾರ್ಗವಾಗಿ ಪಾಜಕ ಕ್ಷೇತ್ರದ ನಂತರ ಪಡುಬೆಳ್ಳೆ ಪೇಟೆಯಲ್ಲಿ ಎಡಕ್ಕೆ ತಿರುಗಿ ಪಾಪನಾಶಿನಿ ಸೇತುವೆ ದಾಟಿ ಮುಂದಕ್ಕೆ ಸುಮಾರು 400ಮೀ. ಸಾಗಿದರೆ ರಸ್ತೆಯ ಎಡಭಾಗದಲ್ಲಿರುವ ಕಾಲು ದಾರಿಯಲ್ಲಿ ಸುಮಾರು 20ಮೀ. ಬೈಲಿನ ಕಡೆಗೆ ನಡೆದು ಸಾಗಿದರೆ ಮೂಡುಬೆಳ್ಳೆ ಗರೋಡಿ ಸಿಗುವುದು.
ಇದೊಂದು ಆಯದ ಗರೋಡಿಯಾಗಿದ್ದು ಮುಖ್ಯ ದ್ವಾರವು ಪೂರ್ವದಿಕ್ಕಿಗೂ ಪಶ್ಶಿಮಕ್ಕೆ ಇನ್ನೊಂದು ದ್ವಾರವೂ ಇದ್ದು ಷಡಾಧಾರ ಪ್ರತಿಷ್ಠೆಯನ್ನು ಹೊಂದಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಬ್ರಹ್ಮ ಗುಂಡದಲ್ಲಿ ಪಂಚಲೋಹದ ಬೆಳ್ಳಿಯ ಕವಚ ಹಾಗೂ ಮುಖಕ್ಕೆ ಬಂಗಾರ ಹೊದಿಸಿದ ಅಶ್ವಾರೂಢ ಬ್ರಹ್ಮರ ಮೂರ್ತಿ ಇದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರ ಆರಾಧನೆ ಇದೆ.
ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯರ ಮರದ ಪಾಪೆ ಇದೆ ಹಾಗೂ ಮಣೆ ಮಂಚದಲ್ಲಿ ಪಿಲ್ಚಂಡಿ ದೈವಕ್ಕೆ ಪೂಜೆ ಸಲ್ಲುತ್ತದೆ.
ಬ್ರಹ್ಮ ಗುಡಿಯ ಹೊರಗೆ ವಾಲಗ ಚಾವಡಿಯ ಬಲಭಾಗದಲ್ಲಿ ಮಾಯಂದಾಲ್ ಹಾಗೂ ಮಗುವಿನ ಮರದ ಪಾಪೆ ಇದೆ. ಎಡಭಾಗದಲ್ಲಿ ಜೋಗಿ ಪುರುಷರ ಮಣೆ ಮಂಚ ಇದೆ.
ಬ್ರಹ್ಮಗುಡಿಯ ಎದುರಿಗೆ, ಉತ್ತರ ದಿಕ್ಕಿನಲ್ಲಿ ಗುರುಕಂಭಕ್ಕೆ ಪೂಜೆ ನಡೆಯುತ್ತದೆ.

ಹೊನ್ನಯ್ಯ ಪೂಜಾರಿ

ಹೊನ್ನಯ್ಯ ಪೂಜಾರಿಯವರು (64ವರ್ಷ ಪ್ರಾಯ) ಪೂ ಪೂಜನೆಯವರಾಗಿದ್ದು ತಮ್ಮ 15ವರ್ಷ ಪ್ರಾಯದಲ್ಲಿದ್ದಾಗಿನಿಂದ ಈ ಸೇವೆ ಮಾಡುತ್ತಿದ್ದಾರೆ. ಇದರ ಮೊದಲು ಅಣ್ಣ ಸಂಜೀವ ಪೂಜಾರಿ, ಮಾವನವರಾದ ಕಿಟ್ಟು ಪೂಜಾರಿ, ಕರಿಯ ಪೂಜಾರಿಯವರು ಸೇವೆ ಮಾಡುತ್ತಿದ್ದರು.

ಗರೋಡಿಯಲ್ಲಿ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ.

ಮೇಲ್ಮನೆ ಉದಯ ಶೆಟ್ಟಿ ಹಾಗೂ ಕೆಳಮನೆ ಭಾಸ್ಕರ ಶೆಟ್ಟಿ ಇವರುಗಳು ಗರೋಡಿಯ ಮೊಕ್ತೇಸರರಾಗಿರುವರು.

ಗರೋಡಿಯಲ್ಲಿ ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ(ಸೂಡ) ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ವರ್ಷಾವಧಿ ಬೈದೇರಯಗಳ ಅಗೆಲು ಸೇವೆ, ನೇಮ, ಜೋಗಿ ಪುರುಷ ಹಾಗೂ ಮಾಯಂದಾಲ್ ಕೋಲ ಸೇವೆ ನಡೆಯುತ್ತದೆ.

ಎಡ್ಮೇರ್, ಮೂಡುಬೆಳ್ಳೆ,(ತೋಕೊಳಿ) ಕುಂಟಾಲ್ ಗುಡ್ಡೆಯ ಜನರು ಈ ಕೂಡು ಕಟ್ಟಿಗೆ ಸೇರಿದವರಾಗಿದ್ದು, ನೀರುಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ, ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಇತ್ಯಾದಿ ಸಾಂಪ್ರದಾಯಿಕ ಹರಕೆಯ ಸೇವೆಗಳಲ್ಲಿ ಜನರು ಪಾಲ್ಗೊಳ್ಳುತ್ತಾರೆ.

ಗರೋಡಿಗೆ ಸ್ಥಿರ ಆದಾಯವಿಲ್ಲದೆ ಊರ ಜನರ ವಂತಿಗೆ, ಕಾಣಿಕೆ, ಸಹಾಯಧನಗಳಿಂದ ಕಾರ್ಯಕ್ರಮಗಳ ವೆಚ್ಚವನ್ನು ಭರಿಸಲಾಗುತ್ತದೆ.

ಗರೋಡಿಯು 1999ರ ಮೇ ತಿಂಗಳಲ್ಲಿ ಜೀರ್ಣೋದ್ಧಾರವಾಗಿತ್ತು. ಈಗ ಗರೋಡಿಯ ಜೀರ್ಣೋದ್ದಾರದ ಯೋಜನೆಯಿದೆ.

ಬೊಗ್ಗು ಪರವ ಮೂಡುಬೆಳ್ಳೆ ಇವರು ಈ ಗರೋಡಿಯ ನೃತ್ಯ ವಿಶಾದರರಾಗಿದ್ದು, ಪ್ರಕಾಶ್ ಮಡಿವಾಳ, ಕಟಪಾಡಿ, ಇವರು ಮಡಿವಾಳರಾಗಿಯೂ, ಬೊಗ್ರ ಸೇರಿಗಾರ ಅಲೆವೂರು ಇವರು ಗರೋಡಿಯ ವಾದ್ಯದವರಾಗಿಯೂ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಬೆಳ್ಳೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಮೂಡುಬೆಳ್ಳೆ,
ಮೂಡುಬೆಳ್ಳೆ ಅಂಚೆ, ಕಾಪು ತಾಲೂಕು,
ಉಡುಪಿ 576120.

ಪೂ ಪೂಜನೆಯವರ ವಿಳಾಸ:

ಹೊನ್ನಯ್ಯ ಪೂಜಾರಿ,
ದೇವರ ಗುಡ್ಡೆ,
ಮೂಡುಬೆಳ್ಳೆ ಅಂಚೆ,
ಕಾಪು ತಾಲೂಕು, ಉಡುಪಿ 576120.
ಮೊಬೈಲ್: 9483079973

ಮಾಹಿತಿ ಸಂಗ್ರಹಿಸಿದ ದಿನಾಂಕ:

04-12-2024

Shree Brahma Baidarkala Garodi, Pande

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಪಾಂದೆ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಡುಬಿದ್ರಿ ತಲುಪಿ ಬಲಭಾಗದ ಸರ್ವೀಸ್ ರಸ್ತೆಯ ಮೂಲಕ ಸುಮಾರು 1 ಕಿ.ಮೀ. ದೂರ ಸಾಗಿ ಶ್ರೀಲಕ್ಷೀರಮಣ ದೇವಸ್ಥಾನದ ನಂತರ ಬಲಕ್ಕೆ ತಿರುಗಿದರೆ ಪಾಂದೆ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಇದೆ.
ಈ ಗರೋಡಿಯು ಆಯದ ಗರೋಡಿಯಾಗಿದ್ದು, ಮುಖ್ಯ ದ್ವಾರವು ಬಡಗು ಮುಖವಾಗಿಯೂ ಪೂರ್ವಕ್ಕೆ ಇನ್ನೊಂದು ದ್ವಾರವಿದೆ.
ಮೂತಿಯಿದೆ. ಗುಂಡದ ಮೇಲಂತಸ್ತಿನಲ್ಲಿ ಗಾಳಿದೇವರ ಆರಾಧನೆ ಇದೆ.
ಗುಂಡದ ಹೊರಗೆ ಎಡಭಾಗದಲ್ಲಿ ಕೋಟಿಚೆನ್ನಯರ ಮಣೆ ಮಂಚವಿದೆ.
ಗುಂಡದ ಹೊರಗೆ ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಕೊಡಮಣಿತ್ತಾಯ ದೈವಗಳ ಮಣೆ ಮಂಚವಿದೆ.

ಬ್ರಹ್ಮ ಗುಡಿಯ ಹೊರಗೆ ಮಣೆ ಮಂಚದಲ್ಲಿ ಪಿಲ್ಚಂಡಿ, ಜೋಗಿಪುರುಷರಿಗೂ ಗುರುಕಂಭಕ್ಕೂ ಪೂಜೆ ನಡೆಯುತ್ತದೆ.

ಗರೋಡಿಯ ಆವರಣದಲ್ಲಿ ಗುಡಿಯಲ್ಲಿ ಮಾಯಂದಾಲ್ ಹಾಗೂ ಮಗುವಿನ ಮರದ ಪಾಪೆಯಿದೆ.

ಅಯ್ಯಕಲ್ಲು, ತುಳಸಿಕಟ್ಟೆ ಹಾಗೂ ಅಶ್ವತ್ತಕಟ್ಟೆಗಳು ಇವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವಿದೆ.

ಗರೋಡಿಯು ಪಡುಬಿದ್ರಿ ಹೊಸಮನೆ ಪ್ಯಾಮಿಲಿ ಟ್ರಸ್ಟ (ರಿ). ಇದರ ಆಡಳಿತದಲ್ಲಿದೆ. ಗರಡಿಮನೆ ಪೂ ಪೂಜನೆಯವರಾದ ಜಯ ಪೂಜಾರಿಯವರು ತೀರಿ ಕೊಂಡಿದ್ದು ಉತ್ತರಾಧಿಕಾರಿಯವರ ನೇಮಕವಾಗದೆ ಸದ್ಯ ಹೆಜಮಾಡಿ ಗರೋಡಿಯ ಗುರುರಾಜ ಪೂಜಾರಿಯವರು ಪೂ ಪೂಜನೆಯ ಕೆಲಸ ಮಾಡುತ್ತಿದ್ದಾರೆ.

ಗರೋಡಿಯಲ್ಲಿ ನಿತ್ಯಪೂಜ, ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, (ಸೂಡ) ಚೌತಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು ಅಗೆಲು ಸೇವೆ, ಬೈದೇರುಗಳ ನೇಮ. ಜೋಗಿಪುರುಷ ಹಾಗೂ ಮಾಯಂದಾಲ್ ದೈವಗಳಿಗೆ ಕೋಲ ಸೇವೆ ನಡೆಯುತ್ತದೆ.

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅಂದಾಜು 2004ರ ಆಸುಪಾಸಿನಲ್ಲಿ ಗರೋಡಿಯ ಜೀರ್ಣೋದ್ಧಾರವಾದ ಬಗ್ಗೆ ಮಾಹಿತಿಯಿದೆ.

ಸಂತೋಷ ಪರವ ನೀರೆ, ಇವರು ಗರೋಡಿಯ ನೃತ್ಯ ವಿಶಾರದರಾಗಿ, ರಮೇಶ ಮಡಿವಾಳ ಮುದರಂಗಡಿ ಇವರು ಮಡಿವಾಳರಾಗಿ ಅಬ್ದುಲ್ ಕರೀಂ ಸಾಹೇಬ್ ಎಲ್ಲೂರು ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಪಾಂದೆ,
ಪಡುಬಿದ್ರಿ ಅಂಚೆ, ಕಾಪು ತಾಲೂಕು,
ಉಡುಪಿ – 574111.

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Shree Brahma Baidarkala Garodi Hejamadi

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಹೆಜಮಾಡಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿ ಎನ್.ಎಚ್. 66ರಲ್ಲಿ ಪಡುಬಿದ್ರಿ ದಾಟಿ ಹೆಜಮಾಡಿ ಟೋಲ್ ಗೇಟಿಗಿಂತ ಸುಮಾರು 1/2ಕಿ.ಮೀ. ಮೊದಲು ರಸ್ತೆಯ ಎಡಭಾಗದಲ್ಲಿದೆ ಈ ಗರೋಡಿ.
ಇದು ಆಯದ ಗರೋಡಿಯಾಗಿದ್ದು ಮುಖ್ಯ ದ್ವಾರವು ಬಡಗು ದಿಕ್ಕಿಗೆ ಇದ್ದು ಪೂರ್ವ ದಿಕ್ಕಿಗೆ ಇನ್ನೊಂದು ದ್ವಾರವಿದೆ. ಷಡಾಧಾರ ಪ್ರತಿಷ್ಠೆಯೂ ಆಗಿದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಪಂಚಲೋಹದ ಬೆಳ್ಳಿ ಮುಚ್ಚಿದ ಅಶ್ವಾ ರೂಢ ಬ್ರಹ್ಮರ ಮೂರ್ತಿ ಇದೆ. ಗುಂಡದ ಮಧ್ಯದ ಅಂತಸ್ತಿನಲ್ಲಿ ಗಾಳಿ ದೇವರಿಗೆ ಹಾಗೂ ಮೇಲಂತಸ್ಥಿನಲ್ಲಿ ಗರುಡ ದೇವರಿಗೆ ಕೂಚಿ ಹಾಗೂ ದೀಪವನ್ನಿಟ್ಟು ಆರಾಧನೆ ಇದೆ. ಗುಂಡದ ಬಲಭಾಗದಲ್ಲಿ ಕುಜುಂಬ ಕಾಂಜವ ಮತ್ತು ಮಗುವಿನ ಪಾಪೆ, ಜೋಗಿ ಪುರುಷ ಹಾಗೂ ಒಕ್ಕು ಬಲ್ಲಾಳರಿಗೆ ಮಣೆ ಮಂಚವಿದೆ. ಗುಂಡದ ಎಡಭಾಗದಲ್ಲಿ ಕೋಟಿಚೆನ್ನಯ ಮತ್ತು ಇಬ್ಬರು ಮಕ್ಕಳ ಮರದ ಪಾಪೆಯಿದೆ. ಬ್ರಹ್ಮ ಗುಡಿಯ ಹೊರಗೆ ಚಾವಡಿಯಲ್ಲಿ ಮಣೆ ಮಂಚದಲ್ಲಿ ಪಿಲ್ಚಂಡಿಯ ಕಂಚಿಯ ಮುಖ ಹಾಗೂ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗಳಿವೆ. ಗರಡಿಯೊಳಗೆ ಗುರುಕಭಕ್ಕೂ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದ ಒಳಗೆ ತುಳಸೀಕಟ್ಟೆ, ಅಯ್ಯಕಲ್ಲು, ಕ್ಷೇತ್ರಪಾಲ ದೈವದ ಕಲ್ಲಿನ ಚಿಟ್ಟೆ, ರಕ್ತೇಶ್ವರಿ ಗುಡಿ, ಜಾರಂದಾಯ ಹಾಗೂ ಬಂಟರ ಗುಡಿ, ಜುಮಾದಿ ಸಾನಗಳಿವೆ. ಗರೋಡಿಯ ಪರಿಸರದಲ್ಲೇ ಗರೋಡಿಗೆ ಸಂಬಂಧಪಟ್ಟ ನಾಗಬನವೂ ಇದೆ.

ಗುರುರಾಜ ಪೂಜಾರಿ

2020ರಿಂದ ಗುರುರಾಜ ಪೂಜಾರಿಯವರು ಪೂ ಪೂಜನಯ ಸೇವೆ ಮಾಡುತ್ತಿದ್ದಾರೆ. ಇವರಿಗೆ ಮೊದಲು ಇವರ ತಂದೆ ಸೀನ ಪೂಜಾರಿ, ಅವರಿಗೆ ಮೊದಲು ಅಜ್ಜ ಸೋಮಯ್ಯ ಪೂಜಾರಿಯವರು ಈ ಸೇವೆ ಮಾಡಿದ್ದರು. ಗರೋಡಿಯಲ್ಲಿ ಬೈದರ ದರ್ಶನಕ್ಕೆ ಸ್ಥಳ ಪಾತ್ರಿಗಳಿಲ್ಲ. ಗರಡಿಯ ಆಡಳಿತವನ್ನು ಬಿಲ್ಲಬ ಸಂಘ ಹೆಜಮಾಡಿ ನೋಡಿ ಕೊಳ್ಳುತ್ತಿದ್ದು, ಪ್ರಸ್ತುತ ಮೋಹನದಾಸ ಹೆಜಮಡಿ ಇವರು ಅಧ್ಯಕ್ಷರಾಗಿದ್ದಾರೆ.

ಗರೋಡಿಯಲ್ಲಿ ನಿತ್ಯ ಪೂಜೆ, ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ, (ಸೂಡ), ಚೌತಿ ಪೂಜೆ, ಅಷ್ಟಮಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರುಕಟ್ಟುವುದು, ಸೋಣದ ಅಗೆಲು, ಎಳ್ಳಮವಾಸೆಯ ನಾಲ್ಕನೇ ದಿನ ಅಗೆಲು ಸೇವೆ, ಐದನೇ ದಿನ ಜೋಗಿ ಪುರುಷ ಕೋಲ, ಆರನೇ ದಿನ ಮಾಯಂದಾಲ್ ನೇಮ, ಹಾಗೂ ಜುಮಾದಿ ತಂಬಿಲಗಳು ನಡೆಯುತ್ತವೆ.

ಹೆಜಮಾಡಿ ಗ್ರಾಮದ ಸುಮಾರು 600 ಮನೆಗಳು ಈ ಗರೋಡಿಯ ಕೂಡುಕಟ್ಟಿಗೆ, ಸೇರಿದ್ದು ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ನಸಂದರ್ಭದಲ್ಲಿ ತೆಗೆದಿಡುವ ಜೋಡು ಕಾಯಿ ಕಾಣಿಕೆ ಸೇವೆ ಮುಂತಾದ ಸಾಂಪ್ರದಾಯಿಕ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.

ಗರೋಡಿಯ ಹೆಸರಿನಲ್ಲಿ 44 ಸೆಂಟ್ಸ ಜಾಗವಿದೆ. ಸ್ಥಿರ ಆದಾಯ ಇಲ್ಲದಿರುವುದರಿಂದ ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರವರ ವರಡ ವಂತಿಗೆ, ಕಾಣಿಕೆ, ದೇಣಿಗೆಗಳಿಂದ ಭರಿಸಲಾಗುತ್ತದೆ.

2012ರಲ್ಲಿ ಗರೋಡಿಯಲ್ಲಿ ಬ್ರಹ್ಮ ಕಲಶೋತ್ಸವ ನಡೆದಿದೆ.

ಬೊಗ್ಗು ಪರವ ಮೂಡುಬೆಳ್ಳೆ ಇವರು ಗರೋಡಿಯ ನೃತ್ಯ ವಿಶಾರದರಾಗಿ, ಕರುಣಾಕರ ಮಡಿವಾಳ, ಹೆಜಮಾಡಿ ಇವರು ಮಡಿವಾಳರಾಗಿ, ಹಿದಾಯತುಲ್ಲ ಎರ್ಮಾಳು ಇವರು ವಾಧ್ಯದವರಾಗಿ ಈ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಹೆಜಮಾಡಿ,
ಹೆಜಮಾಡಿ ಅಂಚೆ,
ಕಾಪು ತಾಲೂಕು.- 574103
ಗುರುರಾಜ ಪೂಜಾರಿ ಮೊಬೈಲ್: 9945166869.

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024

Kannangaar Shree Brahma Baidarkala Garodi, Padubidri

ಕಣ್ಣಂಗಾರು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ, ಪಡುಬಿದ್ರಿ

ಉಡುಪಿಯಿಂದ ರಾಷ್ಟ್ರೀಯ ಹೆದ್ದಾರಿಎನ್‌.ಎಚ್. 66ರಲ್ಲಿ ಪಡುಬಿದ್ರಿ ತಲುಪಿ, ಪಡುಬಿದ್ರಿಯಿಂದ ಮುಲ್ಕಿ ಕಡೆಗೆ ಮತ್ತೆ ಸುಮಾರು 2ಕಿ.ಮೀ. ಸಾಗಿದಾಗ ಹೆದ್ದಾರಿಯ ಬಲಬದಿಯಲ್ಲಿ ಕಣ್ಣಂಗಾರು ಗರೋಡಿಯಿದೆ.
ಇದೊಂದು ಆಯದ ಗರೋಡಿಯಾಗಿದ್ದು, ಮುಖ್ಯದ್ವಾರವು ಬಡಗು ಮುಖವಾಗಿಯೂ ಇನ್ನೊಂದು ದ್ವಾರವು ಪೂರ್ವಾಭಿಮುಖವಾಗಿಯೂ ಇದೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಅಶ್ವಾರೂಢ ಬ್ರಹ್ಮರ ಪಂಚಲೋಹದ ಮೂರ್ತಿ ಇದೆ. ಬೆಳ್ಳಿಯ ಮೂರ್ತಿಯೂ ಇದೆ. ಗುಂಡದ ಮೇಲಿನ ಅಂತಸ್ಧಿನಲ್ಲಿ ಗಾಳಿ ದೇವರಿಗೆ ಮಣೆ ಹಾಗೂ ಕೂಚಿಯಿಟ್ಟು ಆರಾಧನೆ ಇದೆ
ಗುಂಡದ ಎಡಭಾಗದಲ್ಲಿ ಮಣೆ ಮಂಚದಲ್ಲಿ ಕೋಟಿಚೆನ್ನಯರು ಬಲಭಾಗದಲ್ಲಿ ಕುಜುಂಬ ಕಾಂಜವ ಹಾಗೂ ಕೊಡಮಣಿತ್ತಾಯ ಆರಾಧನೆಯಿದೆ.
ಬ್ರಹ್ಮ ಗುಡಿಯ ಹೊರಗೆ ಬಲಭಾಗದಲ್ಲಿ ಮಣೆ ಮಂಚದಲ್ಲಿ ಜೋಗಿ ಪುರುಷ, ಜುಮಾದಿ, ಹಾಗೂ ಮಾಯಂದಾಲ್ ಮತ್ತು ಮಗುವಿನ ಮರದ ಪಾಪೆಗಳಿಗೆ ಪೂಜೆ ನಡೆಯುತ್ತದೆ.
ಬ್ರಹ್ಮಗುಡಿಯ ಎದುರಿಗೆ ಗುರುಕಂಭಕ್ಕೆ ಪೂಜೆ ನಡೆಯುತ್ತದೆ.
ಗರೋಡಿಯ ಆವರಣದಲ್ಲಿ ಜಾರಂದಾಯ ದೈವದ ಗುಡಿಯಲ್ಲಿ ಮಣೆ ಮಂಚದಲ್ಲಿ ಕ್ಷೇತ್ರಪಾಲ ಹಾಗೂ ರಕ್ತೇಶ್ವರಿ ದೈವಗಳಿಗೆ ಕಲ್ಲಿನ ಕಟ್ಟೆಯಲ್ಲಿ ಆರಾಧನೆಯಿದೆ.
ತುಳಸೀಕಟ್ಟೆ ಹಾಗೂ ಅಯ್ಯಕಲ್ಲು, ಅರಸುಗಳು ನೇಮೋತ್ಸವದಂದು ಕುಳಿತುಕೊಳ್ಳುವ ಕಟ್ಟೆಗಳಿವೆ. ಗರೋಡಿಯ ಪರಿಸರದಲ್ಲಿ ಗರೋಡಿಗೆ ಸಂಬಂಧಪಟ್ಟ ನಾಗಬನವೂ ಇದೆ.

ಗಿರಿಧರ ಅಂಚನ್

ಕನ್ನಂಗಾರು ಗರಡಿ ಮನೆ ಗಿರಿಧರ ಅಂಚನ್ (56 ವರ್ಷ ಪ್ರಾಯ) ಇವರು ಪೂ ಪೂಜನೆಯವರಾಗಿದ್ದಾರೆ. ಹಿಂದೆ ಚಂದಪ್ಪ ಪೂಜಾರಿ, ಕೂಕ್ರ ಪೂಜಾರಿಯವರು ಈ ಸೇವೆ ಮಾಡಿದ್ದರು.

ಗರೋಡಿಯಲ್ಲಿ ಈಗ ಬೈದ್ಯರ ದರ್ಶನಕ್ಕೆ ಸ್ಧಳ ಪಾತ್ರಿಗಳಿಲ್ಲ.

ಗರೋಡಿಯಲ್ಲಿ ನಿತ್ಯ ದೀಪ ಇಡುವ ಕ್ರಮ ಇದೆ. ಮಂಗಳವಾರ ಪೂಜೆ, ಸಂಕ್ರಾಂತಿ ಪೂಜೆ (ಸೂಡ) ಚೌತಿ ಪೂಜೆ, ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಎಳ್ಯಮಾವಾಸೆಯ ಎರಡು ದಿನ ಮೊದಲು ಅಗೆಲು ಸೇವೆ, ಮರುದಿನ ಬೈದೇರುಗಳ ನೇಮ, ಜೋಗಿಪುರುಷರ ಕೋಲ ನಡೆದು ಎಳ್ಳಮಾವಾಸ್ಯೆಯ ದಿನ ಮಾಯಂದಾಲ್ ಕೋಲ ನಡೆಯುತ್ತದೆ. ಪಡುಬಿದ್ರಿ ಗ್ರಾಮದ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಾಗಿ ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆಯ ನಂತರ ತಿಂಗಳು ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಭಾಗಿಯಾಗುತ್ತಾರೆ.

ಗರೋಡಿಗೆ ಆಡಳಿತ ಸಮಿತಿಯಿದ್ದು, ಶೀನ ಪೂಜಾರಿಯವರು ಅಧ್ಯಕ್ಷರಾಗಿಯೂ, ರವಿ ಪೂಜಾರಿಯು ಕಾರ್ಯದರ್ಶಿಯಾಗಿಯೂ, ಶ್ರೀಧರ್ ಅಂಚನ್ ಇವರು ಕೋಶಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಗರೋಡಿಯು 04-03-2014ರಲ್ಲಿ ಜೀರ್ಣೋದ್ಧಾರವಾಗಿದೆ.

ಸಂತೋಷ ಪರವ ನೀರೆಬೈಲೂರು ಈ ಗರೋಡಿಯ ನೃತ್ಯವಿಶಾದರಾಗಿದ್ದಾರೆ. ಶರತ್ ಮಡಿವಾಳ ಹೆಜಮಾಡಿ ಇವರು ಮಡಿವಾಳರಾಗಿಯೂ, ನಜೀರ್ ಎರ್ಮಾಳ್ ತೆಂಕ ಇವರು ವಾದ್ಯದವರಾಗಿ ಗರೋಡಿಯ ಸೇವೆ ಮಾಡುತ್ತಿದ್ದಾರೆ.

ಗರೋಡಿಯ ವಿಳಾಸ:

ಕಣ್ಣಂಗಾರು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ,
ಪಡುಬಿದ್ರಿ ಅಂಚೆ, ಕಾಪು ತಾಲೂಕು, ಉಡುಪಿ 574111.

ಪೂ ಪೂಜನೆಯವರ ವಿಳಾಸ:

ಗಿರಿಧರ ಅಂಚನ್,
ಕಣ್ಣಂಗಾರು ಗರೋಡಿ ಮನೆ,
ಪಡುಬಿದ್ರಿ ಅಂಚೆ ಕಾಪು ತಾಲೂಕು,
ಉಡುಪಿ 574111.
ಮೊಬೈಲ್: 9880051876.

ಆಡಳಿತ ಸಮಿತಿ:

ಶೀನ ಪೂಜಾರಿ,
ಅಧ್ಯಕ್ಷರು, ಕಣ್ಣಂಗಾರು ಗರೋಡಿ ಆಡಳಿತ ಸಮಿತಿ,
ಪಡುಬಿದ್ರಿ ಅಂಚೆ, ಕಾಪು ತಾಲೂಕು,
ಉಡುಪಿ 574111.
ಮೊಬೈಲ್: 9845478932.

ಮಾಹಿತಿ ಸಂಗ್ರಹಿಸಿದ ದಿನಾಂಕ:

26-11-2024